Logo

VHP PUBLICATIONS

Hindu Vani


expand_more

ಸಂಪ್ರದಾಯ

By ಶ್ರೀ ಸುತ ಮಡಿಕೇರಿ

ಆದರ್ಶ ಹಿಂದುವಿನ ಸಂಕೇತ ಉಪವಿತ...


ಭರತ ಭೂಮಿಯ ಉದ್ದಗಲಕ್ಕೂ ಆದರ್ಶ ಹಿಂದು ಹಣೆಗೆ ತಿಲಕ ಹೆಗಲಿಗೆ ಶಲ್ಯಾ ಅಥವಾ ಅಂಗವಸ್ತ್ರ, ಕೊರಳಿಗೆ ಜಪಮಾಲೆಯ ಸಹಿತ ಉಪವಿತ (ಜನಿವಾರ) ಧಾರಣೆ ಮಾಡುವುದು ತನ್ನ ಸಂಸ್ಕಾರದ ಅಥವಾ ಸನಾತನ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಈ ರೂಢಿಯನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವಂತೆ ಹಿಂದುತ್ವ ಅಥವಾ ಹಿಂದೂಗಳ ಜೀವನ ಕ್ರಮ ನಮ್ಮ ರಾಷ್ಟ್ರೀಯತೆಯೇ ಆಗಿದೆ.

ಕೇವಲ ಬ್ರಾಹ್ಮಣ ಎಂಬ ಕಾರಣಕ್ಕೆ ಜನಿವಾರ ಹಾಗೂ ಇತರ ಧಾರಣೆಗಳಿಗೆ ನಮ್ಮ ಪೂರ್ವಜರು ಒತ್ತು ನೀಡಲಿಲ್ಲ. ನಮ್ಮ ಆರಾಧ್ಯ ದೇವತೆಗಳಾದ ಶ್ರೀ ರಾಮ ಶ್ರೀ ಕೃಷ್ಣ ಸಹಿತ ವಾನರರೂಪೀ ಆಂಜನೇಯನಿಗೂ ಯಜೋಪವಿತ್ರ ಧಾರಣೆ ಕಂಡುಬಂದಿದೆ. ಹಿಂದೂಗಳಲ್ಲಿ ಅನೇಕರು ತಮ್ಮ ಮಕ್ಕಳಿಗೆ ಬಾಲ ಸಂಸ್ಕಾರ ದಿಸೆಯಲ್ಲಿ ಈ ಜನಿವಾರ ಧಾರಣೆ ಮಾಡಿಸುತ್ತಾರೆ. ಆ ಮೂಲಕ ಚಿಕ್ಕ ವಯಸ್ಸಿನಲ್ಲೇ ಇಷ್ಟದೇವರ ಪೂಜೆ ಜಪ ಮಂತ್ರಪಠನವನ್ನು ಕಲಿಯಲು ಪ್ರೋತ್ಸಾಹಿಸುವ ಕ್ರಮವಿದೆ. ಈ ಸಂಸ್ಕಾರವನ್ನು ಗುರುವಿನ ಮೂಲಕ ಹಾಗೂ ದೇವನೆಲೆ ಅಥವಾ ಪಾವನ ಕ್ಷೇತ್ರಗಳಲ್ಲಿ ಮಾಡಿಸುತ್ತಾರೆ. ಹಿಂದು ಸಮಾಜದ ಬ್ರಾಹ್ಮಣರ ಸಹಿತ ಅದೆಷ್ಟೋ ವರ್ಗದ ಜನಾಂಗಕ್ಕೆ ಈ ಸಂಸ್ಕಾರಗಳು ಇರುತ್ತದೆ. ಅದುವೇ ಭಾರತದ ಸನಾತನ ಪರಂಪರೆಯ ವಿಶೇಷತೆ.

ಹೀಗಿರುವಾಗ ಭಾರತದ ಏಕತೆಯನ್ನು ಅಣಕಿಸುತ್ತಾ ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳ ಸಮಾನತೆಗೆ ಪೂರಕ ಸಮವಸ್ತ್ರ ಒಪ್ಪದ ಆಡಳಿತಶಾಹಿತ್ವ ಶರೀರದ ಅವಿಭಾಜ್ಯ ಅಂಗವಾಗಿರುವ ಜನಿವಾರಕ್ಕೆ ಕತ್ತರಿ ಹಾಕುವ ವಿಕೃತಿ ಮೆರೆದಿರುವುದು ಅಸಹ್ಯಕರ. ಇಂಥ ರಾಷ್ಟ್ರ ಘಾತುಕ ಕೃತ್ಯಗಳನ್ನು ಸರ್ಕಾರದ ಕೃಪಾಪೋಷಿತ ಬುದ್ಧಿಗೇಡಿ ಮಂದಿ ತೀರಾ ಅಧಿಕಾರ ದರ್ಪದಿಂದಲೇ ಮಾಡಿರಲು ಸಾಧ್ಯ. ಅದೆಷ್ಟು ಮಿಷನರಿ ವಿದ್ಯಾ ಸಂಸ್ಥೆಗಳಲ್ಲಿ ಸಮಾನತೆಯ ಪಾಠ ಹೇಳುತ್ತಾ ಶಿಲುಬೆ ಕೊರಳಿಗೆ ಹಾಕಿಕೊಂಡವರು ನಮ್ಮ ಕಣ್ಣ ಮುಂದೆಯೇ ಇಲ್ಲ? ಮುಸುಕುಧಾರಿಗಳಾಗಿ ಶಾಲಾ ಕಾಲೇಜು ಗಳಲ್ಲಿ ಮುಗ್ಧ ಕಂದಮ್ಮಗಳು ನಲಿಯುವ ಅಂಗನವಾಡಿಗಳಲ್ಲಿ ವೃತ್ತಿ ಮಾಡುತ್ತಿಲ್ಲ... ಇಂಥವರೆಲ್ಲರೂ ನಮ್ಮ ಏಕತೆಯನ್ನು ಅಣಕಿಸಿದರೂ ಮೌನಕ್ಕೆ ಜಾರಿರುವ ಕಾನೂನು ಪಾಲಕರು ಜುಟ್ಟು ಜನಿವಾರದ ಮೌಲ್ಯದ ಅರಿವಿಲ್ಲದೆ ಕತ್ತರಿ ಹಾಕಲು ಅದೆಷ್ಟು ಧಾರ್ಷ್ಟ್ಯತನ ವಿರಬೇಕು?.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಶಾಸನ ಹೊರಡಿಸಬೇಕು. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಇಂಥ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಹರಣದ ಸಂಗತಿಗಳು ಪ್ರತಿಧ್ವನಿಸುವಂತಾಗಿದೆ. ಇದಕ್ಕೆ ಇತಿ ಶ್ರೀ ಹಾಡಲೇ ಬೇಕು.