Hindu Vani
Index
ಪುನನಿರ್ಮಾಣ
ಹಾಸನ ಜಿಲ್ಲೆ ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚೆನ್ನಕೇಶವ
 
                                                        ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಎಂಬ ಸಣ್ಣ ಗ್ರಾಮದಲ್ಲಿ ಉದಯಿಸಿದ ಹೊಯ್ಸಳ ಸಾಮ್ರಾಜ್ಯ ವಿಸ್ತಾರಗೊಂಡಂತೆ ಬೇಲೂರು ಮತ್ತು ಹಳೆಬೀಡನ್ನು ರಾಜಧಾನಿಯನ್ನಾಗಿಸಿಕೊಂಡು ಉತ್ತರದಲ್ಲಿ ತುಂಗಭದ್ರಾ ತೀರದವರೆಗೂ ರಾಜ್ಯವನ್ನಾಳಿತು. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡಿನ ಶ್ರೀರಂಗಂ, ಕಂಚಿ ಮತ್ತು ಮಧುರೆವರೆಗೂ, ಆಂದ್ರ ಮತ್ತು ಕೇರಳದ ಕೆಲವು ಭಾಗಗಳಿಗೂ ಸಾಮ್ರಾಜ್ಯವು ವಿಸ್ತರಿಸಿತು. ರಾಮೇಶ್ವರಂ, ತಿರುಪತಿ, ಪಂಡರಾಪುರ ಮುಂತಾದ ನಗರಗಳಲ್ಲೂ ಹೊಯ್ಸಳರ ಪ್ರಭಾವವನ್ನು ಕಾಣಬಹುದು. ಆ 350 ವರ್ಷಗಳ ಹೊಯ್ಸಳ ಅವಧಿಯಲ್ಲಿ ನಿರ್ಮಾಣವಾದ 1500 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಇಂದು ನೂರಾರು ದೇವಾಲಯಗಳು ಕಾಣದಾಗಿವೆ. ಇನ್ನೂ ನೂರಾರು ದೇವಾಲಯಗಳು ಶಿಥಿಲಗೊಂಡಿವೆ.
ಇಚ್ಛಾಶಕ್ತಿ ಮತ್ತು ಛಲವೊಂದಿದ್ದರೆ ಎಂತಹ ಕಾರ್ಯವನ್ನೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಭಗ್ನಗೊಂಡು ಪಾಳುಬಿದ್ದಿದ್ದ ಹಾಸನಜಿಲ್ಲೆ ದುದ್ದ ಹೋಬಳಿಯ ಹೊನ್ನಾವರ ಗ್ರಾಮದ ಶ್ರೀ ಚನ್ನಕೇಶವ ದೇವಾಲಯವನ್ನು ಹೆಸರಿಸಬಹುದು. ಇನ್ನು ಕೆಲವೇ ವರ್ಷಗಳಲ್ಲಿ ನಾಮಾವಶೇಷ ಆಗಲಿದ್ದ ಈ ದೇವಾಲಯವು ಈಗ ಜೀರ್ಣೋದ್ದಾರಗೊಂಡು ನಳನಳಿಸುತ್ತಿದೆ. ಒಂದು ಕಾಲಕ್ಕೆ ಶಿಖರವು ಬಿದ್ದು ಹೋಗಿ, ಗಿಡಗಂಟಿ ಬೆಳೆದು, ಸುತ್ತಲಿನಪರಿಸರವು ದನದ ಕೊಟ್ಟಿಗೆಯಂತಾಗಿದ್ದ ಈ ದೇವಾಲಯ ಈಗ ಸುಸ್ಥಿತಿಗೆ ತಲುಪಿದೆ.
ದೇವಾಲಯದ ಇತಿಹಾಸ:
ದೇವಾಲಯದ ಮುಂದೆ ಇರುವ ಶಿಲಾಶಾಸನದ ಪ್ರಕಾರ ಇದರ ನಿರ್ಮಾಣ ಕಾಲ ಕ್ರಿ.ಶ. 1149. ಹೊಯ್ಸಳರ ಪ್ರಸಿದ್ಧ ಅರಸ ವಿಷ್ಣುವರ್ಧನನ ಮಗ 1ನೇನರಸಿಂಹನ ಪಟ್ಟಾಭಿಷೇಕದ ನೆನಪಿಗಾಗಿ ಆತನ ಮಹಾಪ್ರಧಾನವಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ ಈ ದೇವಾಲಯವನ್ನು ನಿರ್ಮಿಸಿ ಅನೇಕ ದಾನ ದತ್ತಿಗಳನ್ನು ನೀಡುತ್ತಾನೆ. ವಿಷ್ಣುವರ್ಧನನ ನಿಧನಾನಂತರ ಹೊಯ್ಸಳ ರಾಜ್ಯದ ಅನೇಕ ಭಾಗಗಳು ಶತ್ರುಗಳ ವಶವಾಗಿರುತ್ತವೆ. ಆ ಭಾಗಗಳನೆಲ್ಲ ಲಕ್ಷಯ್ಯ ಹೆಗ್ಗಡೆ ಮತ್ತೆ ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿಸುತ್ತಾನೆ. ಈ ಸಮಯದಲ್ಲಿ 1ನೇ ನರಸಿಂಹನು ಇನ್ನೂ ಬಾಲಕನಾಗಿದ್ದಾಗ ಹೊಯ್ಸಳ ಮಂತ್ರಿಗಳು ರಾಜ್ಯವನ್ನು ಕಾಪಾಡುವ ಹೊಣೆ ಹೊರುತ್ತಾರೆ. ಈ ಶಾಸನದಲ್ಲಿ ದೇವರ ನಿತ್ಯ ಪೂಜಾದಿಗಳು ಮತ್ತು ಉತ್ಸವಗಳಿಗಾಗಿ ದಾನಗಳನ್ನು ನೀಡಿದ ವಿವರಗಳಿವೆ. ಈ ದಾನಗಳನ್ನು ಯಾರಾದರೂ ಅಪಹರಿಸಿದರೆ ಅವರು ಘೋರ ಶಾಪಕ್ಕೆ ಗುರಿಯಾಗುತ್ತಾರೆ ಎಂಬ ಶಾಪಾಶಯದ ಶ್ಲೋಕವಿದೆ.
ದೇವಾಲಯದ ವಾಸ್ತು :
ಏಕಕೂಟ ದೇವಾಲಯವಾದ ಇದು ಪೂರ್ವಾಭಿಮುಖವಾಗಿದೆ. ದ್ರಾವಿಡ ಶೈಲಿಯ ಶಿಖರವಿದ್ದು ಮುಖಮಂಟಪ, ನವರಂಗ, ಸುಂದರವಾದಕಂಬಗಳು, ಅಂತರಾಳ, ಶುಕನಾಸಿ ಮತ್ತು ಗರ್ಭಗುಡಿಯನ್ನೊಳಗೊಂಡಿದೆ. ಗರ್ಭಗುಡಿಯಲ್ಲಿ ಸುಮಾರು 6 ಅಡಿ ಎತ್ತರದ ಸುಂದರವಾದ ಚನ್ನಕೇಶವನ ವಿಗ್ರಹವಿದೆ. ಶಂಕ, ಚಕ್ರ, ಗದಾ ಮತ್ತು ಪದ್ಮವನ್ನು ಹಿಡಿದು ನಿಂತಿರುವ ಕೇಶವನ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು.
ದ್ವಾರದ ಮೇಲೆ ಲಲಾಟ ಬಿಂಬದಲ್ಲಿ ದ್ವಾರಲಕ್ಷ್ಮಿಯ ಸುಂದರವಾದ ಶಿಲ್ಪವಿದೆ. ಈ ಶಿಲ್ಪದ ಎರಡೂ ಕಡೆ ಆನೆಗಳಿದ್ದು ದೇವಿಯ ಪಾದಕ್ಕೆ ನಮಿಸುತ್ತಿವೆ. ಚಾಮರಧಾರಿಣಿಯರು ದೇವಿಗೆ ಚಾಮರ ಸೇವೆ ಮಾಡುತ್ತಿದ್ದಾರೆ. ದ್ವಾರದ ಕೆಳಗಡೆ ದ್ವಾರಪಾಲಕರ ಶಿಲ್ಪಗಳಿವೆ. ನವರಂಗದ ಛಾವಣಿಯಲ್ಲಿ ಸುಂದರವಾದ ವಿತಾನ/ ಭುವನೇಶ್ವರಿ ಇದೆ. ಅಷ್ಟದಿಕ್ಷಾಲಕರ ಕೆತ್ತನೆಯೂ ಇದೆ.
 
                                                    ದೇವಾಲಯದ ಹೊರಗೋಡೆಗಳು ಹಲವು ಶಿಲ್ಪಗಳಿಂದ ಅಲಂಕೃತವಾಗಿದ್ದು ವಿಷ್ಣುವಿನ ಅವತಾರಗಳು ಮತ್ತು ಚತುರ್ವಿಂಶತಿ ಮೂರ್ತಿಗಳನ್ನು ಕಾಣಬಹುದು. ವೀರನಾರಾಯಣ, ಕೇಶವ, ಮಾಧವ, ವರಾಹ, ಜನಾರ್ದನ, ನರಸಿಂಹ, ವಾಮನ, ಗೋವರ್ಧನಗಿರಿಧಾರಿ ಕೃಷ್ಣ, ಲಕ್ಷ್ಮೀನಾರಾಯಣ, ದರ್ಪಣ ಸುಂದರಿ, ಕಾಪಾಲಿಕ ಮತ್ತು ವಿಷಕನ್ಯ, ಮರ್ಕಟ ಪೀಡಿತ ಮದನಿಕೆ, ವಿವಿಧ ವಾದ್ಯಗಳನ್ನು ನುಡಿಸುತ್ತಿರುವ ವಾದ್ಯಗಾರರು, ಮತ್ಸಯಂತ್ರಭೇದಕ ಅರ್ಜುನ...ಇನ್ನೂ ಮುಂತಾದ ಸುಂದರವಾದ ಶಿಲ್ಪಗಳಿವೆ. ಹೊಯ್ಸಳರ ಸಾಮಾನ್ಯ ರಚನೆಯಾದ ನಕ್ಷತ್ರಾಕಾರದ ಜಗತಿ ಮತ್ತು ಪ್ರದಕ್ಷಿಣಾ ಪಥ ಇಲ್ಲಿ ಕಾಣುವುದಿಲ್ಲ. ಇದೇ ಗ್ರಾಮದಲ್ಲಿ ಹೊಯ್ಸಳರ ಕಾಲದ್ದೇ ಆದ ಶಿವಾಲಯವೂ ಇದೆ.
ಸಂಕಲ್ಪ, ಸಾಧನೆ ಮತ್ತು ಮುಂದಿನ ಯೋಜನೆಗಳು:
ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ' ಯ ದೃಢ ಸಂಕಲ್ಪದಿಂದಾಗಿ ರಾಜ್ಯ ಪುರಾತತ್ವ ಇಲಾಖೆಯು ಈ ದೇವಾಲಯವನ್ನು ಯಶಸ್ವಿಯಾಗಿ ಜೀರ್ಣೋದ್ಧಾರ ಮಾಡಲು ಸಾಧ್ಯವಾಯಿತು. ಪ್ರಾರಂಭಿಕ ಹಂತದಿಂದಲೂ ವೇದಿಕೆಯು ಇಲಾಖೆಯ ಜೊತೆ ನಡೆಸಿದ ಪತ್ರ ವ್ಯವಹಾರ ಮತ್ತು ಮಾತುಕತೆಯ ಫಲಶ್ರುತಿಯಾಗಿ ಈ ದೇವಾಲಯ ಈಗ ನಮ್ಮ ಕಣ್ಣ ಮುಂದಿದೆ. ವೇದಿಕೆಯ ಕೀರ್ತಿಶೇಷ ಶ್ರೀ ಕೃಷ್ಣಸ್ವಾಮಿ, ನಟರಾಜ ಪಂಡಿತರು, ರಾಮಸ್ವಾಮಿ ಮತ್ತು ವಿನೋದ್ ಕುಮಾರ್ ರವರು ಅಭಿನಂದನಾರ್ಹರು. ದೇವಾಲಯದ ಕಲಾಕರ್ಷಣೆ ನಂತರ ಪುನರ್ಲೋಕಾರ್ಪಣೆ ಕಾರ್ಯವೂ ಸಾಂಗವಾಗಿ ನೆರವೇರಿತು.
ಪ್ರಸ್ತುತ ದೇವಾಲಯದ ಸುತ್ತಲೂ ರಕ್ಷಣಾ ಗೋಡೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹಾಸನದ “ಆಸರೆ ಟ್ರಸ್ಟ್ ನವರು ನಿತ್ಯ ಪೂಜಾದಿಗಳಿಗಾಗಿ ತುಳಸಿ ಮತ್ತು ಹೂವಿನ ಗಿಡಗಳು ಹಾಗೂ ಭಕ್ತಾದಿಗಳಿಗಾಗಿ ಕಲ್ಲುಬೆಂಚಿನ ವ್ಯವಸ್ಥೆ ಮಾಡಲಿದ್ದಾರೆ. ಸ್ಥಳೀಯವಾಗಿ ಸ್ವಾಮಿಗೌಡರು, ಅರ್ಚಕರಾದ ಶ್ರೀನಿವಾಸ್ ಮತ್ತು ಸಹೋದರರು ಹಾಗೂ ಹೊನ್ನಾವರ ಗ್ರಾಮದ ಗ್ರಾಮಸ್ಥರು ನಿತ್ಯ ಪೂಜಾವ್ಯವಸ್ಥೆಯನ್ನು ನಿರ್ವಹಿಸಲಿದ್ದಾರೆ.
(ಲೇಖಕರು ಮೈಸೂರಿನವರಾಗಿದ್ದು, ಹವ್ಯಾಸಿ ಬರಹಗಾರರು ಹಾಗೂ ನಿವೃತ್ತ ರಾಜ್ಯ ಸರ್ಕಾರಿ ಉದ್ಯೋಗಿ, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಯಲ್ಲಿ 'ಲೆಕ್ಕ ಪರಿಶೋಧನೆಯ ಅಧಿಕಾರಿಯಾಗಿ (ಆಡಿಟ್ ಆಫೀಸರ್)ಕಾರ್ಯನಿರ್ವಹಿಸಿದ್ದಾರೆ.
ಐತಿಹಾಸಿಕ ದೇವಾಲಯಗಳ ಕುರಿತು ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಅನ್ನುವ ತಂಡದೊಂದಿಗೆ ಈವರೆಗೆ 8 ದೇವಾಲಯಗಳನ್ನು ಸಂರಕ್ಷಿಸಿದ್ದಾರೆ. ಕನ್ನಡ ಭಾಷೆ ಇತಿಹಾಸ, ಕಲೆ, ಸಂಸ್ಕೃತಿ ಯಲ್ಲಿ ತುಂಬಾ ಆಸಕ್ತರಾಗಿದ್ದು, ಕನ್ನಡ ಭಾಷಾ ಹೋರಾಟ ಗೋಕಾಕ್ ವರದಿ ಅನುಷ್ಠಾನ ಸಲುವಾಗಿ ಜೈಲು ವಾಸವನ್ನು ಸಹ ಅನುಭವಿಸಿದ್ದಾರೆ.)
 
                                                    .
