Hindu Vani
Index
ಕತೆಕತೆ ಕಾರಣ
ದಾನ ಚಿಂತಾಮಣಿ ಅತ್ತಿಮಬ್ಬೆ
ದಾನ ಚಿಂತಾಮಣಿಯೆಂದು ಹೆಸರು ಗಳಿಸಿದ ಅತ್ತಿಮಬ್ಬೆಯು ಕ್ರಿ.ಶ. 10ನೇ ಶತಮಾನದಲ್ಲಿ ಆಳುತ್ತಿದ್ದ ಚಾಲುಕ್ಯ ತೈಲಪನ ಸೇನಾಪತಿಯ ಪತ್ನಿ, ಆಕೆಗೆ ಜಿನತತ್ವಗಳಲ್ಲಿ ಅಪಾರವಾದ ಭಕ್ತಿ. ಕನ್ನಡದ ಪ್ರಾಚೀನ ಕವಿ ಪೊನ್ನನ ಶಾಂತಿನಾಥ ಪುರಾಣವನ್ನು ಎಲ್ಲರೂ ಓದಬೇಕೆಂದು ಆಕೆ ಹಂಬಲಿಸಿದಳು.
.
ಪೂಜ್ಯ ಶಾಂತಿನಾಥರು ಜೈನ ಪರಂಪರೆಯ ಹದಿನಾರನೇ ತೀಥರ್ಂಕರರು. ಶಾಂತಿ ಪುರಾಣವು ಅವರ ಕುರಿತು ಬರೆದ ಪೂಜ್ಯ ಗ್ರಂಥವಾಗಿದ್ದಿತು. ಆದರೆ ಓದಲು ಆಗ ಸೌಕರ್ಯವಿಲ್ಲದ ಕಾಲ. ಮುದ್ರಣ ಯಂತ್ರಗಳು ಇಲ್ಲದಿರುವುದರಿಂದ ಗ್ರಂಥಗಳ ಪ್ರತಿಯನ್ನು ಮಾಡಲು ಕೈಯಿಂದ ಬರೆಸಬೇಕಾಗುತ್ತಿತ್ತು. ಅತ್ತಿಮಬ್ಬೆಯು ಅದನ್ನೇ ಮಾಡಿಸಿದಳು. ಶಾಂತಿ ಪುರಾಣದ ಒಂದು ಸಾವಿರ ಹಸ್ತಪ್ರತಿಗಳನ್ನು ಮಾಡಿಸಿ ಅವನ್ನು ಹಂಚಿದಳು.
ಅದೇ ರೀತಿ ಪಂಚಲೋಹದ ಒಂದು ಸಾವಿರ ಜಿನಪ್ರತಿಮೆಗಳನ್ನು ಮಾಡಿದಳು. ಆ ಪುಟ್ಟ ಪ್ರತಿಮೆಗಳನ್ನು ಭಕ್ತರಿಗೆ ಹಂಚಿದಳು. ಓದಲು ಜಿನಪುರಾಣ ಪೂಜಿಸಲು ಜಿನ ಪ್ರತಿಮೆ. ಇನ್ನು ಜಿನಭಕ್ತರು ಒಂದೆಡೆ ಸೇರುವಂತಾಗಬೇಕೆಂದು ಆಕೆ ಒಂದುಸಾವಿರ ಜಿನಬಸದಿಗಳನ್ನು ಕಟ್ಟಿಸಿಕೊಟ್ಟಳು. ಅವುಗಳಲ್ಲಿ ಲಕ್ಕುಂಡಿಯ ಸುಂದರ ಚೈತ್ಯಾಲಯವೂ ಒಂದಾಗಿದೆ.
ಧರ್ಮದ ಪ್ರಚಾರ ಕಾರ್ಯವು ಚಿಕ್ಕ ಚಿಕ್ಕ ಧಾರ್ಮಿಕ ಕಾರ್ಯಗಳಿಂದಲೇ ಸಾಧ್ಯ ಎನ್ನುವುದು ಅತ್ತಿಮಬ್ಬೆಯ ಅಭಿಮತವಾಗಿದ್ದಿತು.
ಸರಿಸುಮಾರು ಅದೇ ಕಾಲದಲ್ಲಿ ಗಂಗರು ದಕ್ಷಿಣದಲ್ಲಿ ತಮ್ಮ ಸಾಮ್ರಾಜ್ಯವನ್ನು ಆಳುತ್ತಿದ್ದರು. ಚಾವುಂಡರಾಯನು ಗಂಗರಾಜನ ಪ್ರಧಾನಮಂತ್ರಿಯಾಗಿದ್ದನು. ಅವನ ತಾಯಿ ಕಾಳಲಾದೇವಿ. ಆಕೆಯು ಕೂಡಾ ಜಿನಭಕ್ತಿ, ಅವಳ ಭಕ್ತಿಯ ರೀತಿ ಇನ್ನೊಂದು ಬಗೆಯದ್ದು. ಜಿನಧರ್ಮದ ಕಾರ್ಯವು ಅದ್ದೂರಿಯಾಗಿ ನಡೆಯಬೇಕು ಎನ್ನುವುದು ಅವಳ ಹಂಬಲ. ಆ ಮೂಲಕ ಜಿನಧರ್ಮವು ಜಗತ್ತಿನ ಕಣ್ಣು ಕೋರೈಸುವಂತೆ ಬೆಳಗಬೇಕು ಎಂಬುದು ಅವಳ ರೀತಿ, ಅದಕ್ಕಾಗಿ ಆಕೆ ಭವ್ಯವಾದ ಅತಿ ಎತ್ತರವಾದ ಗೊಮ್ಮಟೇಶ್ವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದುಕೊಂಡಳು.
ಕಾಳಲಾದೇವಿಯು ತನ್ನ ಮಗ ಚಾವುಂಡರಾಯನಿಗೆ ಜಗತ್ತಿನಲ್ಲೇ ಎತ್ತರವಾದ ಏಕಶಿಲಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಹೇಳಿದಳು. ಆಕೆಯ ಪ್ರೇರಣೆಯಿಂದ ಶ್ರವಣಬೆಳಗೊಳದ 57 ಅಡಿ ಎತ್ತರದ ಗೊಮ್ಮಟನ ಪ್ರತಿಮೆಯು ಸ್ಥಾಪಿತವಾಯಿತು.
ಹೀಗೆ ದೇಶಭಕ್ತರಾಗಲೀ ಧರ್ಮಭಕ್ತರಾಗಲೀ ಅವರೆಲ್ಲರ ಮನಸ್ಸಿನ ತುಡಿತವು ಒಂದೇ. ತಮ್ಮ ಅಮೋಘ ವ್ಯಕ್ತಿತ್ವದಿಂದ ಜಗತ್ತನ್ನು ಸೆಳೆಯುವ ಕೋಲ್ಕಿಂಚಾಗುವುದು ಅಥವಾ ದಿನದಿನವೂ ತಮ್ಮ ಜೀವನವನ್ನು ದೇಶಭಕ್ತಿಯ ಯಜ್ಞದಲ್ಲಿ ಅರ್ಪಿಸುತ್ತಾ ದಾರಿದೀಪವಾಗುವುದು. ಅತ್ತಿಮಬ್ಬೆ ಮುಂದವಾಗಿ ಉರಿಯುವ ದಾರಿದೀಪ. ಕಾಳಲಾದೇವಿ ಜ್ವಾಜಲ್ಯಮಾನವಾಗಿ ಉರಿಯುವ ಯಜ್ಞಜ್ವಾಲೆ.